ಆನೆಗಳನ್ನು ಸೆರೆಹಿಹಿಡಿದು ಪಳಗಿಸುವ ಬಗೆ ನಿಮಗೆ ಗೊತ್ತೇ?
1 min read
ದಸರಾ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಾಗ ನೋಡುವುದೇ ಸೊಗಸು. ಅದರಲ್ಲೂ ಸಿಂಗರಿಸಿಕೊಂಡು ಅಂಬಾರಿ ಹೊತ್ತು ಮೆರವಣಿಗೆ ಹೋಗುವುದನ್ನು ನೋಡಲು ಜಗತ್ತಿನಾದ್ಯಂತ ಜನ ಬರುತ್ತಾರೆ. ಆದರೆ ಇಂತಹ ಆನೆಗಳನ್ನು ಸೆರೆಹಿಡಿಯಲು, ಪಳಗಿಸಲು ಖೆಡ್ಡಾ ತೋಡಲಾಗುತ್ತದೆ.
ಖೆಡ್ಡಾ ಎಂಬ ಪದ ನಾನಾ ಅರ್ಥದಲ್ಲಿ ಬಳಕೆಯಾಗುತ್ತದೆ. ಖೆಡ್ಡಾ ಎಂದರೆ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವ ವಿಶೇಷ ಬೋನು ಅಥವಾ ಸಣ್ಣ ಗುಂಡಿ. ಇದಕ್ಕೆ ಆನೆಗಳನ್ನು ಬೀಳಿಸಿ, ಪಳಗಿಸುವ ಕಾರ್ಯಾಚರಣೆಗೆ ಖೆಡ್ಡಾ ಎನ್ನುತ್ತೇವೆ. ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿ ಅವು ಜನಗಳಿಗೂ ಬೆಳೆಗಳಿಗೂ ಹಾನಿಮಾಡತೊಡಗಿದಾಗ ಅವನ್ನು ಸೆರೆಹಿಡಿಯಲಾಗುತ್ತದೆ. ಒಂದೋ ಎರಡೋ ಪುಂಡಾನೆಗಳಾದರೆ ಬೆದರಿಸಿ ಕಾಡಿಗೆ ಅಟ್ಟುತ್ತಾರೆ. ಇಲ್ಲವೆ ಗುಂಡಿಟ್ಟು ಕೊಂದುಬಿಡುತ್ತಾರೆ. ಬಹುಸಂಖ್ಯೆಯಲ್ಲಿ ಅವನ್ನು ಹಿಡಿಯಬೇಕಾದಾಗ ಮಾತ್ರ ಖೆಡ್ಡಾ ಯೋಜನೆಯನ್ನು ಹಾಕಲಾಗುತ್ತದೆ.
ಖೆಡ್ಡಾ ವಿನ್ಯಾಸ: ನದಿಯ ಒಂದು ಪಕ್ಕದಲ್ಲಿ ಖೆಡ್ಡಾ ಬೋನು ಇರುತ್ತದೆ. ಅದರ ಸುತ್ತಲೂ ೮ ರಿಂದ ೯ ಅಡಿ ಆಳವಾದ ಕಂದಕವೊಂದು ಇರುತ್ತದೆ. ಖೆಡ್ಡಾಕ್ಕೆ ೩ ಪ್ರವೇಶದ್ವಾರಗಳಿರುತ್ತವೆ. ಒಂದೊಂದು ದ್ವಾರದ ಬಳಿಯೂ ಉದ್ದನೆಯ ಕಾಡುಮರಗಳ ಕಂಬಗಳನ್ನು ಆಳವಾಗಿ ಹೂಳಿ ಒಂದೊಂದು ಅಡ್ಡಪಟ್ಟಿಗಳಿರುವ ಬಾಗಿಲನ್ನು ಅಳವಡಿಸಲಾಗಿರುತ್ತದೆ. ಖೆಡ್ಡಾದಿಂದ ೧೦-೧೨ ಮೈಲಿಗಳವರೆಗೆ ಓಡಾಡಲು ಅನುಕೂಲವಾಗುವಂತೆ ನೇರದಾರಿಗಳನ್ನೂ ಅಡ್ಡದಾರಿಗಳನ್ನೂ ಮಾಡಿರುತ್ತಾರೆ. ಸೆರೆಸಿಕ್ಕುವ ಮೊದಲು, ಆ ಮೇಲೂ ಆನೆಗಳಿಗೆ ಅಸಹಜವೆನ್ನಿಸದಂತೆ ಈ ದಾರಿಗಳನ್ನು ಸೊಪ್ಪು ಸದೆಗಳಿಂದ ಮುಚ್ಚಿಬಿಡಲಾಗುತ್ತದೆ.
ಕಾರ್ಯಾಚರಣೆ ವಿಧಾನ: ಆನೆಗಳನ್ನು ಹಿಡಿದು ಪಳಗಿಸುವುದು ಬಹಳ ಸೂಕ್ಷ್ಮ ಮತ್ತು ಆಯಾಸದ ಕೆಲಸ. ಹತ್ತಾರು ಜನ ದಟ್ಟಾರಣ್ಯದಲ್ಲಿ ಅಡಗಿ ಕುಳಿತು, ಆನೆಗಳ ಚಲನವಲನಗಳನ್ನು ಪರಿಶೀಲಿಸುತ್ತಾ, ಅವು ಮೇಯುವ, ನೀರು ಕುಡಿಯುವ, ವಿಶ್ರಾಂತಿಸುವ ಸ್ಥಳಗಳನ್ನು ಗುರುತುಮಾಡಿ ಬೇರೆ ಬೇರೆ ಸ್ಥಳಗಳಲ್ಲಿ ಆಳವಾದ ಕುಳಿಗಳನ್ನು ತೋಡುತ್ತಾರೆ. ಸುತ್ತಮುತ್ತ ಸಾವಿರಾರು ಜನ ಢೋಲು, ನಗಾರಿ ಮೊದಲಾದ ವಾದ್ಯಗಳ ಗದ್ದಲ ಮಾಡುತ್ತ ಆನೆಗಳತ್ತ ಸಾಗುತ್ತಾರೆ. ಆನೆಗಳೆಲ್ಲ ಈ ಸದ್ದಿಗೆ ಕಂಗಾಲಾಗಿ ಅರಣ್ಯದ ಮಧ್ಯ ಧಾವಿಸಿ ಮುಚ್ಚಿದ ಕುಳಿಗಳು ಕಾಣದೇ ಅವುಗಳಲ್ಲಿ ಕುಸಿದು ಗಂಟಲು ಬಿರಿಯುವಂತೆ ಘೀಳಿಡುತ್ತವೆ. ಕಾಡಾನೆಗಳಿಗೆ ಅದ್ಭುತ ಶಕ್ತಿಯಿರುತ್ತದೆ. ಆದ್ದರಿಂದ ಅವುಗಳ ಶಕ್ತಿಯನ್ನು ಕುಂದಿಸಲು ಹಲವಾರು ದಿನ ಅವಕ್ಕೆ ಉಪವಾಸ ಹಾಕುತ್ತಾರೆ. ಮಾನವನ ಅಪ್ಪಣೆಯಂತೆ ನಡೆದರೆ ಸಾಕಾನೆಗೆ ಆಹಾರ ದೊರೆಯುತ್ತದೆ. ತನಗೂ ಏಕೆ ದೊರೆಯಬಾರದು ಎಂಬ ವಿವೇಕ ಕಾಡಾನೆಗೆ ಬಂದಾಗ ಅದು ಪಳಗಿದೆ ಎಂದರ್ಥ.
ಎಲ್ಲಾ ಆನೆಗಳನ್ನೂ ಖೆಡ್ಡಾ ವಿಧಾದಿಂದಲೇ ಸೆರೆಹಿಡಿಯದಿದ್ದರೂ, ಕೆಲವು ಸಂದರ್ಭಗಳಲ್ಲಿ ಇದೇ ವಿಧಾನ ಬಳಕೆಯಾಗುತ್ತದೆ.